Friday 30 May 2014

ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು

ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು:

 ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬಡದೇಶವಾಗಿದ್ದ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ ಈಗ ಅಧಿಕ ವಾಗಿದ್ದು ಶ್ರೀಮಂತಿಕೆಯತ್ತ ದಾಪುಗಾಲಿರಿಸಿದೆ. ಆದರೆ ಭಾರತವನ್ನು ವಿದ್ಯುಚ್ಛಕ್ತಿ ಕೊರತೆ ಕಾಡುತ್ತಿದ್ದು ಪ್ರಗತಿಗೆ ಅಡಚಣೆಯಾಗಿ ಪರಿಣಮಿಸಿದೆ. ಭಾರತದ ತಲಾವಾರು ವಿದ್ಯುಚ್ಛಕ್ತಿ ಬಳಕೆಯ ಪ್ರಮಾಣ ಕೇವಲ 700 ಮೇಗಾವ್ಯಾಟ್ ಮಾತ್ರ. ದೇಶದ ಶೇ.20 ರಷ್ಟು ಮಂದಿಗೆ ವಿದ್ಯುತ್ ಲಭಿಸುತ್ತಿಲ್ಲ. ಜಗತ್ತಿನಲ್ಲೇ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರು ಭಾರತದ ಪ್ರಜೆಗಳು. ಭಾರತದ ವಿದ್ಯುತ್ ಕೊರತೆಯನ್ನು ನಿವಾರಿಸಲು ವಷ೯ಕ್ಕೆ 30 ರಿಂದ 40 ಸಾವಿರ ಮೇಗಾವ್ಯಾಟ್ ನಷ್ಟು ವಿದ್ಯುತ್ ಅಧಿಕವಾಗಿ ಉತ್ಪಾದನೆಯಾಗಬೇಕು. ಆದರೆ ಕಳೆದ ನಾಲ್ಕೈದು ವಷ೯ಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗಿರುವ ವಿದ್ಯುತ್ 550000 ಮೆಗಾವಾಟ್ ಗಳು. ಅಂದರೆ ಸನ್ನಿವೇಶದ ಜಟಿಲತೆ ಅರಿವಾಗಬಹುದು.

ಅಮೇರಿಕದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಫಲಿತಾಂಶಗಳಿಗೆ 2020ನೇ ಇಸ್ವಿವರೆಗಿನ ಕಾಲಾವಧಿ ಬೇಕಾಗುತ್ತದೆ. ಹಾಗೆ ಪ್ರಯೋಜನ ದೊರೆತರೂ ಸಿಗುವ ಹೆಚ್ಚಿನ ವಿದ್ಯುತ್ ಪ್ರಸಕ್ತ ಶೇ3ಕ್ಕೆ ಮತ್ತೆ ಶೇ3 ರಷ್ಟು ಸೇರಿ ಶೇ6 ರಷ್ಟು ಮಾತ್ರವಾಗುತ್ತದೆ. ಆದರೆ ಜನಸಂಖ್ಯಾ ಸ್ಫೋಟ ಮತ್ತು ವಿದ್ಯುತ್ ಬೇಡಿಕೆಯ ಆಧಿಕ್ಯ ಗಮನಿಸಿದರೆ ಈ ಪ್ರಮಾಣ ಏನೇನೂ ಅಲ್ಲ. ಇದರೊಂದಿಗೆ ಪ್ರಸರಣ ತೊಂದರೆ ಮತ್ತು ಕೆಲವೊಮ್ಮೆ ಸಂಭವಿಸುವ ತಾಂತ್ರಿಕ ಅಡಚಣೆಗಳು ಮತ್ತು ಅವುಗಳ ದುರಸ್ತಿಗೆ ಬೇಕಾಗುವ ವಿದ್ಯುತ್ ವೆಚ್ಚ ಮತ್ತಷ್ಟು ಆತಂಕವನ್ನುಂಟುಮಾಡಿವೆ.

 2012ರ ಜುಲೈ 30 ಮತ್ತು 31 ರಂದು ಉತ್ತರ ಭಾರತದ 22 ರಾಜ್ಯಗಳಲ್ಲಿ ವಿದ್ಯುತ್ ನಿಲುಗಡೆಯಾಗಿ ಸುಮಾರು 70 ಕೋಟಿಯಷ್ಟು ಜನರು ಇದರ ಭಾಧೆಗೊಳಗಾದರು. ಭಾರತದ ಪವರ್ ಗ್ರೀಡ್ ಗಳಲ್ಲಿ ತಲೆದೂರಿದ ತಾಂತ್ರಿಕ ಅಡಚಣೆಯಿಂದಾಗಿ ಈ ಭಾರೀ ವಿದ್ಯುತ್ ವ್ಯತ್ಯಯವಾಗಿತ್ತು. ಭಾರತದಲ್ಲಿ ಸರ್ಕಾರಿ ಸೇವೆಗೆ ಸಹಸ್ರಾರು ಎಂಜಿನಿಯರ್ ಗಳು ಸೇರ್ಪಡೆಗೊಳ್ಳುತ್ತಾರೆ. ಆದರೆ ಇವರ ತಾಂತ್ರಿಕ ಪ್ರತಿಭೆಯ ಪ್ರಯೋಜನ ಸಾರ್ವಜನಿಕರಿಗೆ ಲಭಿಸುವುದಿಲ್ಲ. ಏಕೆಂದರೆ ಈ ಇಂಜನಿಯರ್ ಗಳಿಂದ ಗುಮಾಸ್ತರ ಇಲ್ಲವೇ ಅಡಳಿತಾತ್ಮಕ ಸೇವೆ ಪಡೆಯುವ ಸರ್ಕಾರ ತಾಂತ್ರಿಕ ಕರ್ತವ್ಯದ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸುತ್ತದೆ. ಎಂಜಿನಿಯರ್ ಗಳಿಗೆ ತಾಂತ್ರಿಕ ಹೊಣೆಗಾರಿಕೆಗಳನ್ನು ವಹಿಸಿದಾಗ ಮಾತ್ರ ಅವರ ಕೌಶಲ್ಯ ವ್ರದ್ದಿಗೊಂಡು ದೇಶವಾಸಿಗಳಿಗೆ ಅದರ ಪೂರ್ಣ ಪ್ರಯೋಜನ ಲಭಿಸುತ್ತದೆ.
 ಇದಲ್ಲದೆ ವಿದ್ಯುತ್ ಕೊರತೆ ನೀಗಲು ಮತ್ತಷ್ಟು ಮಾರ್ಗೋಪಾಯಗಳಿವೆ.

 * ಭಾರತವು ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಸಮರ್ಥವಾಗಿದೆ. ಆ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯ.

 * ಭಾರತ ದೇಶವು ನೈಸರ್ಗಿಕ ಸಂಪನ್ಮೂಲವಾದ ಕಲ್ಲಿದ್ದಲನ್ನು ಬಳಸಿ ಶಾಖೋತ್ಪನ್ನ ವಿದ್ಯುತ್ ತಯಾರಿಸುತ್ತಿದೆ. ಆದರೆ ಮುಂದೆ ಕಲ್ಲಿದ್ದಲು ನಿಕ್ಷೇಪ ಬರಿದಾಗುವ ಸಾಧ್ಯತೆಯಿದೆ. ಇದರ ಬದಲಾಗಿ ಪ್ರಾಕ್ರತೀಕವಾಗಿ ಲಭಿಸುವ ಸೌರಶಕ್ತಿಯ ಸದ್ಬಳಕೆ ಮಾಡಿಕೊಂಡರೆ ಅಗತ್ಯವಿರುವ ಪ್ರಮಾಣದ ವಿದ್ಯುಚ್ಛಕ್ತಿ ಪಡೆಯಲು ಸಾಧ್ಯವಾಗುತ್ತದೆ.

* ಸೌರಶಕ್ತಿಯ ಉತ್ಪಾದನೆಯ ವೆಚ್ಚವೂ ಕಡಿಮೆ ಎಂಬ ಅಂಶ ಗಮನಾರ್ಹ. ಇದಲ್ಲದೆ ಸಕಲ ಪ್ರಾದೇಶಿಕ ವಿದ್ಯುಚ್ಛಕ್ತಿ ಜಾಲವನ್ನು ಬೆಸೆಯುವ ರಾಷ್ಟೀಯ ಗ್ರೀಡ್ ಸ್ಥಾಪನೆಗೆ ಸರ್ಕಾರ ಆದ್ಯ ಗಮನ ನೀಡಬೇಕು.

 * ಸಮುದ್ರದ ಅಲೆಗಳಿಂದಲೂ ವಿದ್ಯುತ್ ಉತ್ಪಾದನೆ ಸಾಧ್ಯ. ಭಾರತವು 7000km ನಷ್ಟು ಉದ್ದದ ಕರಾವಳಿ ತೀರ ಹೊಂದಿದೆ. ಇಂಥಾ ಸಮ್ರದ್ದ ಸಂಪನ್ಮೂಲದ ಸದ್ಬಳಕೆ ಸರ್ಕಾರದ ಪ್ರಥಮಾದ್ಯತೆ ಆಗಬೇಕಾಗಿದೆ.


SRC TEAM, BELLARY.

No comments:

Post a Comment

Thanking You For Your Valuable Comment. Keep Smile