Friday 30 May 2014

ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಯ ಉಗಮದ ಕುರಿತು ವಿವರಿಸಿ. ಪಂಚಾಯಿತಿ ರಾಜ್ ವ್ಯವಸ್ಧೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮಹತ್ವವೇನು?

 ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಯ ಉಗಮದ ಕುರಿತು ವಿವರಿಸಿ. ಪಂಚಾಯಿತಿ ರಾಜ್ ವ್ಯವಸ್ಧೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮಹತ್ವವೇನು?
 (Explain the origins of the Panchayati Raj system in India and the significance of the 73rd Constitutional Amendment in Panchayati Raj systems)

ಪಂಚಾಯಿತಿಗಳು ಅಥವಾ ಗ್ರಾಮಸಭೆಗಳಿಗೆ ಭಾರತದಲ್ಲಿ ಒಂದು ದೀರ್ಘ ಇತಿಹಾಸವೇ ಇದೆ. ಸಾಂಪ್ರದಾಯಿಕ ಪಂಚಾಯಿತಿಗಳು ಅನೌಪಚಾರಿಕ ಅಧಿಕಾರ ಕೇಂದ್ರಗಳಾಗಿದ್ದರೂ ಗ್ರಾಮದ ಸಕಲ ವ್ಯವಹಾರಗಳನ್ನು ನಡೆಸುವ, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವ ಹಾಗೂ ಶಾಂತಿ-ಸುವ್ಯವಸ್ಧೆಗಳನ್ನು ಕಾಪಾಡುವ ಜವಾಬ್ದಾರಿ ಅವುಗಳ ಮೇಲಿದ್ದದ್ದು ಗಮನಾರ್ಹ.

 ಗ್ರಾಮ ಮಟ್ಟದ, ಅಥವಾ ನೆರೆಹೊರೆಯ ಗ್ರಾಮಗಳ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯತಿಗಳೇ ಅಲ್ಲದೆ ಜಾತಿ ಪಂಚಾಯತಿಗಳೂ ಕೌಟುಂಬಿಕ ಹಾಗೂ ಜಾತಿ ಸಂಬಂಧಿ ವಿಚಾರಗಳನ್ನು ಕುರಿತಂತೆ ತೀರ್ಮಾನಗಳನ್ನು ನೀಡುವ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಬ್ರಿಟೀಷರು ಭಾರತಕ್ಕೆ ಬಂದ ನಂತರ ಪಂಚಾಯಿತಿ ವ್ಯವಸ್ಧೆಗೆ ಒಂದು ಔಪಚಾರಿಕ ಸ್ವರೂಪ ದೊರೆಯಿತು. ಪಂಚಾಯಿತಿಗಳ ಸ್ವಾಯತ್ತತೆಯನ್ನು ಕಾಪಾಡುವ ಮನಸ್ಸಿಲ್ಲದ ಬ್ರಿಟೀಷರು ಅವುಗಳನ್ನು ಪ್ರಧಾನವಾಗಿ ಆದಾಯ ಸಂಗ್ರಹಣಾ ಮೂಲಗಳಾಗಿ ನೋಡಿದರೂ, ಗ್ರಾಮ ಮಟ್ಟದಲ್ಲಿ ಸ್ಧಳೀಯ ಆಡಳಿತ ಸಂಸ್ಧೆಗಳಾಗಿ ಅವು ರೂಪುಗೊಂಡವು.

ಇಪ್ಪತ್ತನೇ ಶತಮಾನದ ಆರಂಭ ಕಾಲದಲ್ಲಿ ಪ್ರಜಾಸತ್ತಾತ್ಮಕ ಸ್ವರೂಪವನ್ನು ಈ ಸಂಸ್ಧೆಗಳಿಗೆ ನೀಡಲು ಬ್ರಿಟೀಷರಿಂದಲೇ ಪ್ರಯತ್ನಗಳು ನಡೆದು Royal Committee On Decentralized , (ರಾಯಲ್ ಕಮಿಟಿ ಆನ್ ಡಿಸೆಂಟ್ರಲಾಯೀಡ್ಜ್) ಎಂಬ ಸಮಿತಿಯ ನೇಮಕವಾದಾಗ, ಗ್ರಾಮ ಸ್ಧಳೀಯ ಸಂಸ್ಧೆಗಳಾಗಿ ಪಂಚಾಯಿತಿಗಳು ಉಗಮವಾಗಲು ಪೂರಕವಾದ ವಾತಾವರಣ ನಿರ್ಮಾಣವಾಯಿತು.

 ಮಹಾತ್ಮಗಾಂಧೀಜಿಯವರು ಈ ಸಂಸ್ಥೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಗೋಚರತೆ, ಹಾಗೂ ಸ್ಧಳೀಯ ಅಗತ್ಯಗಳನ್ನು ಪೂರೈಸುವ ಅಧಿಕಾರವನ್ನು ಪಂಚಾಯಿತಿಗಳಿಗೇ ನೀಡಬೇಕೆಂಬ ಮಾಡಿದ ಒತ್ತಾಸೆ, ಅವುಗಳು ಸ್ಧಳೀಯ ಸರ್ಕಾರಗಳ ಸ್ವರೂಪವನ್ನು ಪಡೆಯಲು ಕಾರಣವಾದ ಮತ್ತೊಂದು ಪ್ರಮುಖ ಅಂಶ.

 * 73ನೇ ತಿದ್ದುಪಡಿ - 'ಮೌನಕ್ರಾಂತಿ':
ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಗೆ ಒಂದು ದಿಕ್ಕು ದೊರೆತು, ಪಂಚಾಯತ್ ಸಂಸ್ಥೆಗಳು ಸ್ಧಳೀಯ ಹಾಗೂ ಸ್ವಯಂ-ಆಡಳಿತ ತತ್ವಗಳನ್ನು ರೂಢಿಸಿಕೊಳ್ಳುವಂಥ ಅವಕಾಶ ದೊರೆತದ್ದು 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಕಾರಣದಿಂದಾಗಿ. ಈ ತಿದ್ದುಪಡಿಯನ್ನು ವಿಕೇಂದ್ರೀಕರಣದ ಇತಿಹಾಸದಲ್ಲಿ 'ಮೌನಕ್ರಾಂತಿ' ಎಂದು ಬಣ್ಣಿಸಲಾಗಿದೆ. ಸ್ಧಳೀಯ ಸಂಸ್ಧೆಗಳಿಗೆ ಪ್ರಜಾಸತ್ತಾತ್ಮಕ ಅಧಿಕಾರವನ್ನು ನೀಡಿ ಗ್ರಾಮೀಣ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಒಂದು ನಿಜವಾದ ಅರ್ಥದಲ್ಲಿ ಸ್ಧಾನ ದೊರೆತಿದ್ದೇ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮೂಲಕ.


SRC TEAM, BELLARY.

No comments:

Post a Comment

Thanking You For Your Valuable Comment. Keep Smile